ಸಂಘಟನೆ ಮಂಜುನಾಥ್ ಹೊಸೂರು (ವಿಶೇಷ ವರದಿ)
ಹೊಸೂರು -ಮುಂಗಾರು ಮಳೆ ರೈತಾಪಿ ವರ್ಗದಲ್ಲಿ ಭರವಸೆಯ ಆಶಾಕಿರಣ ಮೂಡಿಸಿದ್ದು, ಕೃಷಿ ಚಟುವಟಿಕೆ ಗರಿಗೆದರುತ್ತಿದ್ದು. ಇದಕ್ಕೆ ಪೂರಕವಾಗಿ ಕೃಷಿ ಇಲಾಖೆ ಕೂಡ ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ, ಗೊಬ್ಬರ, ಕೃಷಿ ಪರಿಕರಗಳನ್ನು ಪೂರೈಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ.
ಕಳೆದ ಒಂದು ವಾರಗಳಿಂದ ಸಾಲಿಗ್ರಾಮ ಹಾಗೂ ಕೃಷ್ಣರಾಜನಗರ ಅವಳಿ ತಾಲೂಕಿನ ಚುಂಚನಕಟ್ಟೆ, ಮಿರ್ಲೆ, ಹೆಬ್ಬಾಳು, ಕಸಬಾ, ಹೊಸಗ್ರಹಾರ ಹೋಬಳಿ ವ್ಯಾಪ್ತಿಯ ಎಲ್ಲೆಡೆ ಮಳೆಯ ವಾತಾವರಣ ಸೃಷ್ಟಿಯಾಗಿ ಬಿರುಗಾಳಿ ಸಹಿತ ಅಲ್ಲಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ಬರದಿಂದ ಕಂಗೆಟ್ಟಿದ್ದ ಅನ್ನದಾತರಿಗೆ ಭರವಸಯ ಬೆಳಕು ಮೂಡಿದೆ. ಅದರಲ್ಲೂ ಒಂದು ವಾರದದಿಂದ ತಾಲೂಕಿನ ಸುತ್ತಮುತ್ತ ಉತ್ತಮ ಮೋಡ ಕವಿದ ವಾತಾವರಣದ ಜತೆಗೆ ಉತ್ತಮ ಹದ ಮಳೆಯಾಗಿದ್ದು. ರೈತರು ತಮ್ಮ ಜಮೀನಿನ ಹೊಲ ಗದ್ದೆಗಳತ್ತ ಖುಷಿಯಿಂದ ಮುಖ ಮಾಡಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಉಳುಮೆಗೆ ಸಿದ್ಧತೆ:- ವಾಡಿಕೆಯಂತೆ ಮುಂಗಾರು ಪೂರ್ವ ಮಳೆ ಚುರುಕಾಗಿದ್ದು, ರೈತ ಸಮುದಾಯದಲ್ಲಿ ಮಂದಹಾಸ ಮೂಡಿಸಿದೆ. ಈ ವರ್ಷ ಉತ್ತಮ ಮಳೆ, ಬೆಳೆ ನಿರೀಕ್ಷೆಯೊಂದಿಗೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಭಾರೀ ಉತ್ಸಾಹದಿಂದ ಜಮೀನುಗಳನ್ನು ಟ್ಯಾಕ್ಟರ್, ಟಿಲ್ಲರ್, ನೇಗಿಲು, ಕುಂಟೆಗಳ ಉಳುಮೆ ಮೂಲಕ ಹದಗೊಳಿಸುವುದು, ಕಸಕಡ್ಡಿ ಆರಿಸಿ ಹೊಲ ಸ್ವಚ್ಛಗೊಳಿಸಿ. ತಿಪ್ಪೆಗೊಬ್ಬರ, ಗೋಡು ಗಳನ್ನು ಜಮಿಗೆ ಹರಡುವ ಮೂಲಕ ಬಿತ್ತನೆಗೆ ಅನುಕೂಲವಾಗುವಂತೆ ಉಳುಮೆ ಮಾಡಿ ಭೂಮಿ ಹದಗೊಳಿಸುತ್ತಿದ್ದಾರೆ.
ಬಾಡುತ್ತಿದ್ದ ಬೆಳೆಗೆ ಜೀವಾಮೃತ:- ಕಾವೇರಿ ಕಣಿವೆಯ ನಾಲಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿಯ ಕೆಲ ಭಾಗದಲ್ಲಿ ಬೇಸಿಗೆಯಲ್ಲೂ ಭತ್ತ ನಾಟಿ ಮಾಡಿದ್ದರು. ಮತ್ತೊಂದೆಡೆ ಮಳೆ ಆಶ್ರಿತ ಪ್ರದೇಶದಲ್ಲಿಯೂ ಕೂಡ ರೈತರು ಜೋಳ, ಕಬ್ಬು, ರಾಗಿ, ತಂಬಾಕು, ತರಕಾರಿ ಸೇರಿದಂತೆ ಇನ್ನಿತರ ಹಲವು ರೀತಿಯ ವಾಣಿಜ್ಯ ಬೆಳೆಗಳ ಬಿತ್ತನೆ ಮಾಡಲಾಗಿತ್ತು. ಆದರೆ ಮಳೆ ಇಲ್ಲದೆ ಕಂಗಾಲಾಗಿದ್ದ ರೈತರ ನಿರೀಕ್ಷೆಯಂತೆ ವರುಣನ ಕೃಪೆ ತೋರಿದ್ದು ಬಾಡುತ್ತಿದ್ದ ಬೆಳೆಗೆ ಜೀವಾಮೃತ ಸಿಕ್ಕಿದಂತಾಗಿದೆ ಬೆಳೆಗಳು ಹಸಿರಿನಿಂದ ನಳನಲಿಸುತ್ತಿವೆ ಇನ್ನೊಂದೆಡೆ ಮಳೆಯಾಶ್ರಿತ ಭೂಮಿಯಲ್ಲಿ ವಾಣಿಜ್ಯ ಬೆಳೆಗಳ ಬಿತ್ತನೆ ಕೂಡ ಚುರುಕುಗೊಂಡಿದೆ.
ಬರನಿಗಿಸಿದ ಮಳೆ:- ಸದ್ಯ ಮಳೆ ಸುರಿಯುತ್ತಿರುವ ಪರಿಣಾಮ ಬರಗಾಲದಿಂದ ತತ್ತರಿಸಿ ಹೋಗಿದ್ದ ಜನರಿಗೆ ಒಂದಿಷ್ಟು ಸಂತಸ ತಂದಿದೆ. ನೀರಿಲ್ಲದೆ ಒಣಗಿದ್ದಕೆರೆ, ಕಟ್ಟೆಬಾವಿ ಹಳ್ಳಕೊಳ್ಳಗಳಲ್ಲಿ ಮಳೆಯ ನೀರು ಶೇಖರಣೆಯಾಗುತ್ತಿದೆ. ಪರಿಸರದಲ್ಲಿ ಹಸಿರು ಕಾಣುವಂತಾಗಿದ್ದು, ಪ್ರಾಣಿ ಪಕ್ಷಿಗಳು ಸೇರಿದಂತೆ ಜಾನುವಾರು ಗಳಿಗೆ ಕುಡಿಯವ ನೀರು ಹಾಗೂ ಮೇವಿನ ಬರ ನೀಗಿಸಿದೆ.ವಾಡಿಕೆ ಮಳೆ:- ಜನವರಿ ತಿಂಗಳಿನಿಂದ ಮೇ ತಿಂಗಳವರೆಗೆ ವಾಡಿಕೆ ಮಳೆ ಶೇ. 145 ಮಿ.ಮೀ. ಮಳೆಯಲ್ಲಿ. ಶೇ. 117 ಮಿ.ಮೀ. ನಷ್ಟು ವಾಡಿಕೆ ಮಳೆಯಾಗಿದೆ. ತಾಲೂಕಿನ ಸುಮಾರು 32,500 ಹೆಕ್ಟೇರ್ ಖುಷ್ಕಿ ಪ್ರದೇಶ ಹಾಗೂ 21,000 ಹೆಕ್ಟೇರ್ ನೀರಾವರಿ ಪ್ರದೇಶವಿದ್ದು ಪ್ರಸ್ತುತ 11,580 ಹೆಕ್ಟೇರ್ ನಲ್ಲಿ ತಂಬಾಕು, 1,375 ಹೆಕ್ಟೇರ್ ನಲ್ಲಿ ಮುಸುಕಿನ ಜೋಳ ಹಾಗೂ 4,175 ಹೆಕ್ಟೇರ್ ಪ್ರದೇಶದಲ್ಲಿ ಅಲಸಂದೆ ಬಿತ್ತನೆಯಾಗಿದೆ.
ಬಿತ್ತನೆ ಬೀಜ, ಪರಿಕರ ವಿತರಣೆ:- ಈಗಾಗಲೇ ಕೃಷಿ ಇಲಾಖೆ ಎಲ್ಲಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಸುಕಿನ ಜೋಳ, ಅಲಸಂದೆ, ಉದ್ದು, ಹೆಸರು ಹಾಗೂ ಹಸಿರೆಲೆ, ಸೆಣಬು ಸೇರಿದಂತೆ ಟಾರ್ಪಲ್, ಪಿ.ವಿ.ಸಿ. ಪೈಪ್ ಗಳನ್ನು ರೈತರಿಗೆ ಸಹಾಯ ಧನದಡಿ ವಿತರಿಸಲಾಗುತ್ತಿದೆ.