ಬೆಂಗಳೂರು : ತೆಲಂಗಾಣ ವಿಧಾನಸಭೆ ಚುನಾವಣೆ ಫಲಿತಾಂಶ ಭಾನುವಾರ ಪ್ರಕಟವಾಗಲಿದ್ದು, ಅತಂತ್ರ ಫಲಿತಾಂಶ ಉಂಟಾದರೆ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಇಂದು ಡಿಸಿಎಂ ಡಿಕೆ ಶಿವಕುಮಾರ್ ಹೈದರಾಬಾದ್ಗೆ ತೆರಳಲಿದ್ದಾರೆ.
ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ತೆಲಂಗಾಣದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಏರಲಿದೆ ಎಂದೇ ಭವಿಷ್ಯ ನುಡಿದಿವೆ. ಹೀಗಿದ್ದರೂ ಅತಂತ್ರ ಫಲಿತಾಂಶ ಪ್ರಕಟವಾದರೆ ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಮಾಡುವ ಸಾಧ್ಯತೆ ಹೆಚ್ಚಿದೆ.
ಈ ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ನೀಡಿ ತೆಲಂಗಾಣದಲ್ಲೂಸರ್ಕಾರ ರಚನೆಗೆ ಕಾರ್ಯತಂತ್ರ ರೂಪಿಸುವ ಭಾಗವಾಗಿ ಟ್ರಬಲ್ ಶೂಟರ್ ಡಿಕೆಶಿ ಇಂದು ಸಂಜೆ ಹೈಕಮಾಂಡ್ ಸೂಚನೆಯಂತೆ ತೆಲಂಗಾಣಕ್ಕೆ ತೆರಳಲಿದ್ದಾರೆ. ಆಪರೇಷನ್ ಆತಂಕ ಎದುರಾದರೆ ಶಾಸಕರನ್ನು ಕರ್ನಾಟಕಕ್ಕೆ ಡಿಕೆಶಿ ಕರೆತರಲಿದ್ದಾರೆ.
ತೆಲಂಗಾಣ ಕಾಂಗ್ರೆಸ್ನ ಸಂಪೂರ್ಣ ಪರಿಸ್ಥಿತಿ ನಿಯಂತ್ರಣಕ್ಕೆ ತಗೆದುಕೊಳ್ಳಲು ಡಿಕೆಶಿಗೆ ಹೈಕಮಾಂಡ್ ಸೂಚನೆ ನೀಡಿದೆ. ಭಾನುವಾರದ ಪರಿಸ್ಥಿತಿ ನೋಡಿ ಡಿಕೆಶಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. 119 ವಿಧಾನಸಭೆ ಸದಸ್ಯರನ್ನು ಹೊಂದಿರುವ ತೆಲಂಗಾಣದಲ್ಲಿ 70.60% ರಷ್ಟು ಮತದಾನ ದಾಖಲಾಗಿದೆ.
ಪಂಚರಾಜ್ಯಗಳ ಚುನಾವಣೆಯಲ್ಲಿ ರಾಜಸ್ಥಾನ, ತೆಲಂಗಾಣ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಜಯಗಳಿಸಲಿದೆ. ಹೀಗಾಗಿ ಶಾಸಕರನ್ನು ರಕ್ಷಿಸಿಕೊಳ್ಳುವ ಅನಿವಾರ್ಯತೆಯಿಲ್ಲ. ಒಂದು ವೇಳೆ ಐದು ರಾಜ್ಯಗಳ ಚುನಾಯಿತ ಶಾಸಕರನ್ನು ನೋಡಿಕೊಳ್ಳುವಂತೆ ಹೈಕಮಾಂಡ್ ನನ್ನನ್ನು ಸೂಚಿಸಿದರೆ ನಾನು ಅವರನ್ನು ನಿಭಾಯಿಸಲು ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದಾರೆ.
ತೆಲಂಗಾಣದಲ್ಲಿ 2018ರ ಚುನಾವಣೆಯಲ್ಲಿ ಬಿಆರ್ಎಸ್ 88 ಸೀಟ್ಗಳನ್ನು ಗೆದ್ದಿತ್ತು. ಕಾಂಗ್ರೆಸ್ 19, ಎಐಎಂಐಎಂ 7, ಟಿಡಿಪಿ 2 ಸ್ಥಾನಗಳನ್ನು ಗೆದ್ದಿದ್ದವು. ಬಿಜೆಪಿ ಒಂದು ಕ್ಷೇತ್ರದಲ್ಲಿ ಮಾತ್ರ ಜಯ ಸಾಧಿಸಿತ್ತು. ಆಂಧ್ರದಿಂದ ಬೇರ್ಪಟ್ಟು ಹೊಸ ರಾಜ್ಯವಾಗಿ ಉದಯವಾದ ನಂತರ ತೆಲಂಗಾಣದಲ್ಲಿ ಎರಡು ಬಾರಿ ಚುನಾವಣೆ ನಡೆದಿದೆ. ಎರಡು ಬಾರಿಯೂ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ಎಸ್ ಪಕ್ಷವು ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಏರಿದೆ. ಈ ಬಾರಿ ಚುನಾವಣೆಯು ಕೆಸಿಆರ್ಗೆ ಸುಲಭದ ಹಾದಿಯಾಗಿ ಉಳಿದಿಲ್ಲ ಎಂದು ಸಮೀಕ್ಷೆಗಳು ಹೇಳಿವೆ.