ಹುಬ್ಬಳ್ಳಿ : ಬಿಜೆಪಿಯವರೇನು ಸಾಚಾಗಳಲ್ಲ. ಸಿಬಿಐ ಅನ್ನೋದು ಬುರುಡೆ. ಇವರು ಅಧಿಕಾರದಲ್ಲಿದ್ದಾಗ ಕೊಲೆ ಕೇಸ್ಗಳನ್ನು ಸಿಬಿಐಗೆ ಕೊಟ್ಟರು ಏನಾಯಿತು? ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಹೀರೆಕುಡಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ತಾಲೂಕಿನ ವರೂರ್ ಜೈನ್ ಮಂದಿರಕ್ಕೆ ಭೇಟಿ ನೀಡಿದ ಮುತಾಲಿಕ್ ಜೈನಮುನಿ ಗುಣಧರನಂದಿ ಮಹಾರಾಜ್ ಅವರಿಗೆ ಸಾಂತ್ವನ ಹೇಳಿದರು. ಈ ವೇಳೆ ಮೃತ ಕಾಮಕುಮಾರ ನಂದಿ ಶ್ರೀಗಳ ಹಿನ್ನೆಲೆ ಬಗ್ಗೆ ಚರ್ಚೆ ಮಾಡಿದ ಅವರು, ಜೈನ ಧರ್ಮದ ಜೊತೆಗೆ ಹಿಂದೂಪರ ಸಂಘಟನೆಗಳು ಇವೆ ಎಂಬ ಭರವಸೆಯನ್ನು ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರೇನು ಸಾಚಾಗಳಲ್ಲ. ಇವರು ಅಧಿಕಾರದಲ್ಲಿದ್ದಾಗ ಕೊಲೆ ಕೇಸ್ಗಳನ್ನು ಸಿಬಿಐಗೆ ಕೊಟ್ಟರು, ಏನಾಯಿತು? 22 ಕೇಸ್ಗಳಿಗೆ ನ್ಯಾಯ ಸಿಕ್ಕಿದೆಯಾ? ಪರಮೇಶ್ ಮೇಸ್ತಾ ಕೇಸ್ ಏನಾಯಿತು? ಬಿಜೆಪಿಯವರು ಇದೀಗ ಸಿಬಿಐಗೆ ವಹಿಸಿ ಎನ್ನುತ್ತಿದ್ದಾರೆ. ಇವರೇನು ಸಾಚಾಗಳ? ರಾಜಕಾರಣಿಗಳು ನಿರ್ಲಜ್ಜರು. ನಾನು ಹಿಂದುತ್ವ ಉಳಿಸಲು ಏನು ಮಾಡುತ್ತೇವೆ ನೋಡಿ ಎಂದು ಹರಿಹಾಯ್ದರು
ಜೈನ ಸ್ವಾಮೀಜಿಯ ಹತ್ಯೆ ನಾವು ಖಂಡಿಸುತ್ತೇವೆ. ನಾನು ಅಲ್ಲಿಗೆ ಭೇಟಿ ಕೊಟ್ಟು ಬಂದಿದ್ದೇನೆ. ಮಠದಲ್ಲಿ ಸ್ವಾಮೀಜಿ ಒಬ್ಬರೇ ಇರುತ್ತಿದ್ದರು. ಹೀರೆಕುಡಿಯಿಂದ ಮಠ ಸುಮಾರು 2 ಕಿಲೋ ಮೀಟರ್ ದೂರ ಇದೆ. ಒಂಟಿತನ ನೋಡಿ ವ್ಯವಸ್ಥಿತವಾಗಿ ಕೊಲೆ ಮಾಡಿದ್ದಾರೆ. ಈ ಕೊಲೆ ಸಾಮಾನ್ಯ ಕೊಲೆ ಅಲ್ಲ. ಕುರಿ, ಕೋಳಿ ಕತ್ತರಿಸುವ ರೀತಿಯಲ್ಲಿ ಹತ್ಯೆ ಮಾಡಿದ್ದಾರೆ. ಈ ರೀತಿ ಮಾಡಿದವರನ್ನು ಸರ್ಕಾರ ಹೊರಹಾಕಬೇಕು. ಇದರ ಹಿಂದೆ ಹಣದ ಕಾರಣ ಇಲ್ಲ. ಬೇರೆ ಏನೋ ಷಡ್ಯಂತ್ರ ಇದೆ ಎಂದರು.
ನಾನು ಇದನ್ನು ಸಿಬಿಐಗೆ ವಹಿಸಿ ಅಂತಾ ಹೇಳಲ್ಲ. ಬಿಜೆಪಿಯವರೇ ಬಾಯಿ ಮುಚ್ಚಿ. ಕರ್ನಾಟಕ ಪೊಲೀಸರು ಕೇವಲ ನಾಲ್ಕು ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಠಿಣ ಶಿಕ್ಷೆ ಎಂದರೆ ಏನು? ನಮ್ಮ ಸಿಸ್ಟಮ್ ಸರಿ ಇಲ್ಲ. ಒಂದು ವರ್ಷದಲ್ಲಿ ಅವರು ಹೊರಗೆ ಬರುತ್ತಾರೆ. ಉತ್ತರಪ್ರದೇಶ ಮಾದರಿಯಲ್ಲಿ ಮೂವರು ಆರೋಪಿಗಳ ಮನೆಗೆ ಬುಲ್ಡೋಜರ್ ಹತ್ತಿಸಬೇಕು. ಕ್ರೌರ್ಯ ಕ್ರೌರ್ಯವೇ. ಅವರು ಯಾರೇ ಆಗಲಿ ಅವರ ಮನೆ ಮೇಲೆ ಬುಲ್ಡೋಜರ್ ಹತ್ತಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು
ಸನ್ಯಾಸಿಯನ್ನು ಕೊಲ್ಲಲು ಅವರಿಗೆ ಯಾವ ಮಾನಸಿಕತೆ ಇದೆ. ಇದು ಕರ್ನಾಟಕಕ್ಕೆ ಕಳಂಕ. ಯಾರಾದರೂ ಇವರನ್ನು ರಕ್ಷಣೆ ಮಾಡಿದರೆ ಇದೇ ಮಚ್ಚು ನಾಳೆ ನಿಮ್ಮ ಮನೆಗೆ ಬರುತ್ತದೆ. ಯಾರೂ ಯಾವುದೇ ಒತ್ತಾಯಕ್ಕೆ ಮಣಿಯಬಾರದು. ಯೋಗಿ ಮಾದರಿಯಲ್ಲಿ ಅವರ ಮೇಲೆ ಕ್ರಮ ಆಗಬೇಕು. ಯಾರೂ ಅವರ ಪರ ವಕಾಲತ್ತು ಮಾಡಬಾರದು ಎಂದು ನಾನು ವಕೀಲರ ಸಂಘಕ್ಕೆ ಮನವಿ ಮಾಡುತ್ತೇನೆ. ಅಕಸ್ಮಾತ್ ವಕಾಲತ್ತು ಮಾಡಿದರೆ ಅವರ ಕ್ರೌರ್ಯಕ್ಕೆ ಸಹಾಯ ಮಾಡಿದ ಹಾಗೆ ಆಗುತ್ತದೆ ಎಂದು ಹೇಳಿದರು.
ಇದು ತಾಲಿಬಾನ್ ಮನಸ್ಥಿತಿ. ಇದರಲ್ಲಿ ಮುಚ್ಚುಮರೆ ಮಾಡಿದರೆ ದೇಶಕ್ಕೇ ಅಪಾಯಕಾರಿ. ಪೊಲೀಸರು ಯಾರನ್ನೂ ಮುಚ್ಚುಮರೆ ಮಾಡಬಾರದು. ಅಕಸ್ಮಾತ್ ಮುಚ್ಚುಮರೆ ಮಾಡಿದರೆ ಅವರು ಪೊಲೀಸರನ್ನೂ ಬಿಡಲ್ಲ. ಪೊಲೀಸ್ ಇಲಾಖೆಯ ಮೂಲಕ ದಿಕ್ಕು ತಪ್ಪಿಸುವ ಕೆಲಸ ಆಗುತ್ತಿದೆ. ಈಗಾಗಲೇ ದಿಕ್ಕು ತಪ್ಪಿಸಿದ್ದಾರೆ. ಇದರ ಹಿಂದೆ ಬಲವಾದ ಕಾರಣವಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಬಾಯಿಮುಚ್ಚಿ ಮುಕ್ತ ತನಿಖೆಗೆ ಅವಕಾಶ ಮಾಡಿಕೊಡಿ ಎಂದು ಮೂರು ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು