ಚಾಮರಾಜನಗರ: ಬೇಸಿಗೆಯಲ್ಲಿ ಅರಣ್ಯ ಸಂಪತ್ತು ಸಂರಕ್ಷಣೆ ಮಾಡುವ ಹಿನ್ನೆಲೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಗತ್ಯ ಕ್ರಮ ಕೈಗೊಂಡು, ದಿನದ ೨೪ ಗಂಟೆಯೂ ಕಟ್ಟೆಚ್ಚರ ವಹಿಸಲಾಗಿದೆ ಎಂದು ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಡಾ. ಪಿ.ರಮೇಶ್ ಕುಮಾರ್ ತಿಳಿಸಿದ್ದಾರೆ.
ಬೇಸಿಗೆ ಸಮೀಪಿಸುತ್ತಿದ್ದು, ಈಗಾಗಲೇ ಬಿಸಿಲಿನ ಪ್ರಮಾಣ ತೀವ್ರಗೊಂಡಿದೆ. ಕಳೆದ ಎರಡು ವರ್ಷಗಳಿಂದ ಬಂಡೀಪುರದಲ್ಲಿ ಯಾವುದೇ ಕಾಡ್ಗಿಚ್ಚು ಪ್ರಕರಣ ದಾಖಲಾಗಿಲ್ಲ. ಈ ಬಾರಿಯೂ ಬಂಡೀಪುರ ಅರಣ್ಯವನ್ನು ಕಾಡ್ಗಿಚ್ಚಿನಿಂದ ರಕ್ಷಣೆ ಮಾಡುವುದಕ್ಕೆ ಸಿಬ್ಬಂದಿಗಳು ಪಣ ತೊಟ್ಟು ಶ್ರಮಿಸುತ್ತಿದ್ದಾರೆ. ೧೩ ವಲಯಗಳಲ್ಲಿ ಸುಮಾರು ೫೦೦ ಫೈರ್ ವಾಚರ್ಗಳು ಹಾಗೂ ಇಲಾಖೆಯ ೨೫೦ಕ್ಕೂ ಹೆಚ್ಚು ಸಿಬ್ಬಂದಿಗಳು ಅರಣ್ಯ ಸಂಪತ್ತು ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಈಗಾಗಲೇ ಬಂಡೀಪುರ ಅರಣ್ಯದಲ್ಲಿ ೨೮೭೬ ಕಿ.ಮೀ. ಫೈರ್ಲೈನ್ ನಿರ್ಮಿಸಲಾಗಿದ್ದು, ಫೈರ್ಲೈನ್ಗಾಗಿ ತೆರವುಗೊಳಿಸಿದ್ದ ಲಂಟಾನಾ ಕಳೆಗಿಡವನ್ನು ಸುಡುವ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಡಂಚಿನ ಗ್ರಾಮಗಳಲ್ಲಿ ಈಗಾಗಲೇ ಬೀದಿ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿದ್ದು, ಬೆಂಕಿ ಪ್ರಕರಣ ತಡೆಗೆ ಅರಣ್ಯ ಇಲಾಖೆಯೊಂದಿಗೆ ಸಹಕಾರ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಇದಕ್ಕೆ ಕಾಡಂಚಿನ ಗ್ರಾಮಸ್ಥರು ಹಾಗೂ ಹಾಡಿ ನಿವಾಸಿಗಳು ‘ನಮ್ಮ ಬಂಡೀಪುರ ರಕ್ಷಣೆಗೆ ಬದ್ಧವಾಗಿದ್ದು, ಇಲಾಖೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಅಗ್ನಿಶಾಮಕ ಇಲಾಖೆಯಿಂದ ಬೆಂಕಿ ನಂದಿಸುವ ವಾಹನಗಳನ್ನು ಕಾಡ್ಗಿಚ್ಚು ನಿಯಂತ್ರಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಯಾವುದಾದರೂ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡರೆ ತುರ್ತಾಗಿ ಆ ಪ್ರದೇಶಕ್ಕೆ ಬೇರೆ ಬೇರೆ ವಲಯದ ಸಿಬ್ಬಂದಿಗಳನ್ನು ಕರೆತರಲು ವಾಹನದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಬಂಡೀಪುರಕ್ಕೆ ಭೇಟಿ ನೀಡಿ ಫೈರ್ಲೈನ್ ಕಾಮಗಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿಯೊಂದು ವಲಯದಲ್ಲೂ ಬ್ಲೋವರ್ಗಳನ್ನು ನೀಡಲಾಗಿದ್ದು, ಅದು ಬೆಂಕಿ ನಂದಿಸಲು ಸಹಕಾರಿಯಾಗಲಿದೆ. ೫ ರಿಂದ ೬ ಮಂದಿ ಮಾಡುವ ಕೆಲಸವನ್ನು ಒಂದು ಬ್ಲೋವರ್ ಮಾಡುವುದರಿಂದ ಇದು ಬೆಂಕಿ ತಡೆಗೆ ನೆರವಾಗಲಿದೆ ಎಂದು ತಿಳಿಸಿದರು.
ಬಂಡೀಪುರ ಅರಣ್ಯದಲ್ಲಿ ಹಾದು ಹೋಗಿರುವ ಗುಂಡ್ಲುಪೇಟೆ-ಊಟಿ ರಸ್ತೆ, ಗುಂಡ್ಲುಪೇಟೆ-ಸುಲ್ತಾನ್ ಬತ್ತೇರಿ ರಸ್ತೆಯುದ್ದಕ್ಕೂ ಎರಡೂ ಬದಿಯಲ್ಲೂ ಕಳೆಗಿಡವನ್ನು ಸುಡಲಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಮಾರ್ಗಮಧ್ಯೆ ಧೂಮಪಾನ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.