ಕನ್ನಡ ಉಳಿವಿಗಾಗಿ ಎಲ್ಲೆಡೆ ಹೋರಾಟ ನಡೀತಿದೆ. ಕರ್ನಾಟಕ ಮಾತೃಭಾಷೆ ಉಳಿವಿಗೆ ಹೋರಾಟಗಾರರು ಪಣತೊಟ್ಟು ನಿಂತಿದ್ದಾರೆ. ಇದೆಲ್ಲಾ ಬೆಳವಣಿಗೆ ಮಧ್ಯೆಯೇ ಸರ್ಕಾರ ಕನ್ನಡ ಪುರೋಹಿತರಿಗೆ ಅವಮಾನ ಮಾಡಿರೋ ಘಟನೆ ಬೆಳಕಿನ ಬಂದಿದೆ. ಕನ್ನಡದ ಪೂಜಾರಿ, ಕನ್ನಡದ ಪಂಡಿತ ಎಂದೇ ಖ್ಯಾತಿಗಳಿಸಿರುವ ಹಿರೇಮಗಳೂರು ಕಣ್ಣನ್ ಅವರಿಗೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ. ಕಣ್ಣನ್ ಅವರಿಗೆ ನೀಡುತ್ತಿದ್ದ ವೇತನವನ್ನು ತಡೆ ಹಿಡಿಯುವುದರ ಜೊತೆಗೆ ಕಳೆದ 10 ವರ್ಷದ ಸಂಬಳವನ್ನು ವಾಪಸ್ ಮಾಡುವಂತೆ ಸೂಚನೆ ನೀಡಲಾಗಿದೆ.
ಚಿಕ್ಕಮಗಳೂರು ಹೊರ ವಲಯದ ಕಲ್ಯಾಣ ಕೋದಂಡರಾಮ ದೇವಾಲಯದಲ್ಲಿ ಹಿರೇಮಗಳೂರು ಕಣ್ಣನ್ ಅವರು ಕಳೆದ 50 ವರ್ಷಗಳಿಂದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಣ್ಣನ್ ಅವರ ಖಾತೆಗೆ ಪ್ರತಿ ತಿಂಗಳು ಸಂಬಳವಾಗಿ 7,500 ರೂಪಾಯಿ ಜಮೆ ಆಗುತ್ತಿತ್ತು. ಈ 7,500 ರೂಪಾಯಿ ನೀಡಿದ ಸಂಬಳದಲ್ಲಿ 4,500 ವಾಪಸ್ ನೀಡಲು ಚಿಕ್ಕಮಗಳೂರು ತಹಶೀಲ್ದಾರ್ ಸುಮಂತ್ ಅವರು ನೋಟಿಸ್ ನೀಡಿದ್ದಾರೆ. ದೇವಾಲಯದ ಆದಾಯ ಕಡಿಮೆ, ಸಂಬಳ ಹೆಚ್ಚು ನೀಡಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಡಳಿತ ಅರ್ಚಕರಿಗೆ ನೀಡುತ್ತಿದ್ದ ಸಂಬಳವನ್ನ ವಾಪಸ್ ಕೇಳಿದೆ. ವೇತನ ತಡೆಹಿಡಿದು ನೋಟಿಸ್ ನೀಡಲಾಗಿದ್ದು, 4,500 ರೂಪಾಯಿಯಂತೆ 10 ವರ್ಷದ ಹಣವನ್ನ ವಾಪಸ್ ನೀಡಲು ಸೂಚನೆ ನೀಡಲಾಗಿದೆ. ಅಂದ್ರೆ 4 ಲಕ್ಷ 74 ಸಾವಿರ ರೂಪಾಯಿ ವಾಪಸ್ ನೀಡುವಂತೆ ಸೂಚಿಸಲಾಗಿದೆ.
ಕನ್ನಡದ ಪಂಡಿತ, ಸಾಹಿತಿ, ವಾಗ್ಮಿ ಎಂದೇ ಹಿರೇಮಗಳೂರು ಕಣ್ಣನ್ ಅವರು ಖ್ಯಾತಿ ಪಡೆದಿದ್ದಾರೆ. ಕಳೆದ 50 ವರ್ಷಗಳಿಂದ ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಕಣ್ಣನ್ ಅವರಿಗೆ ಸರ್ಕಾರದ ನೋಟಿಸ್ ನೀಡಿರೋದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.