ಚಾಮರಾಜನಗರ : ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚಕ್ಕರೆ ಗ್ರಾಮದ ತೋಟದ ಮನೆಯಿಂದ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಸಂಬಂಧಿಯ ಕಾರು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ದೊರೆತಿದೆ.
ಸಿ.ಪಿ.ಯೋಗೇಶ್ವರ್ ಅವರ ಭಾವ ಚಕ್ಕರೆ ಗ್ರಾಮದ ಮಹದೇವಯ್ಯ ಮೂರು ದಿನಗಳ ಹಿಂದೆ ಬಿಳಿ ಬಣ್ಣದ ಬ್ರಿಜಾ ಕಾರುಸಮೇತ (KA-42 N0012) ಕಾಣೆಯಾಗಿದ್ದರು. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶನಿವಾರ ಬೆಳಿಗ್ಗೆ ಮೊಬೈಲ್ ಟವರ್ ಲೊಕೇಶನ್ನಲ್ಲಿ ಪರಿಶೀಲನೆ ನಡೆಸಿದಾಗ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತ ಇರುವುದಾಗಿ ತಿಳಿದು ಬಂದಿತ್ತು. ಇದೀಗ ಹನೂರು ತಾಲ್ಲೂಕಿನ ರಾಮಪುರ ಪೊಲೀಸ್ ಠಾಣೆ ಸಮೀಪದ ರಾಮಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಕಾರು ದೊರೆತಿದೆ.
ಈಗಾಗಲೇ ರಾಮಪುರ ಪೊಲೀಸರು ಪರಿಶೀಲನೆ ನಡೆಸಿದ್ದು, ಕಾರು ಮಾತ್ರ ಆಸ್ಪತ್ರೆಯ ಮುಂಭಾಗ ನಿಂತಿದೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮಹದೇವಯ್ಯ ಬಗ್ಗೆ ಮಾಹಿತಿ ಸಿಕ್ಕಿಲ್ಲ. ತನಿಖೆ ಮುಂದುವರೆದಿದೆ.