ಹುಬ್ಬಳ್ಳಿ : ಕಾಂಗ್ರೆಸ್ನಲ್ಲಿ ಈಗ ಮೂರು ಗುಂಪುಗಳಾಗಿವೆ. ಕಾಂಗ್ರೆಸ್ ಒಳಜಗಳ ಹೊರ ಬಂದಿದೆ. ತಮ್ಮ ಬೀದಿಜಗಳವನ್ನು ಮರೆಮಾಚಲು ಸುಳ್ಳು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ಆಂತರಿಕ ಒಳಜಗಳದಿಂದ ಈ ಸರ್ಕಾರ ಬಿದ್ದು ಹೋಗುತ್ತದೆ. ಸಿದ್ದರಾಮಣ್ಣನ ಸರ್ಕಾರ ಬಂದ ಮೇಲೆ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಟೀಲ್ ದೂರಿದ್ದಾರೆ.
ಒಂದು ಕಡೆ ವಿದ್ಯುತ್ನ ಕ್ಷಾಮ ಪ್ರಾರಂಭ ಆಗುತ್ತಿದೆ. ಇನ್ನೊಂದು ಕಡೆ ನೀರಿಲ್ಲ, ಇದರ ಪರಿಣಾಮ ರೈತ ಸಂಕಷ್ಟಕ್ಕೆ ಸಿಲುಕೊಂಡಿದ್ದಾನೆ. ಇದರ ಹಿನ್ನೆಲೆಯಲ್ಲಿ ನಮ್ಮ ಪಕ್ಷದಿಂದ ಬರ ಅಧ್ಯಯನ ಮಾಡು ತ್ತಿದ್ದೇವೆ. ನಮ್ಮಲ್ಲಿರುವ ಶಾಸಕರು ಎಲ್ಲರೂ ಸಮರ್ಥರೇ. ಕಳೆದ ಅಧಿವೇಶನದಲ್ಲಿ ನಮ್ಮೆಲ್ಲ ಶಾಸಕರೂ ಒಗ್ಗಟ್ಟಾಗಿ ಹೋರಾಟ ಮಾಡಿದ್ದಾರೆ ಎಂದರು.
ನಾವು ಕಾಂಗ್ರೆಸ್ ಶಾಸಕರನ್ನ ಸೆಳೆಯಲು ಮುಂದಾಗಿಲ್ಲ, ಅಂತಹ ಪ್ರಯತ್ನಕ್ಕೆ ನಾವು ಕೈ ಹಾಕಿಲ್ಲ. ಎನ್ಡಿಎ ಜತೆ ಜೆಡಿಎಸ್ ಮೈತ್ರಿ ಆಗಿದೆ. ವಿಧಾನ ಪರಿಷತ್ ಚುನಾವಣೆಯ ಹೊಂದಾಣಿಕೆ ಬಗ್ಗೆ ಕೇಂದ್ರ ನಾಯಕರು ನಿರ್ಧಾರ ಮಾಡ್ತಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ 6 ಕ್ಷೇತ್ರಕ್ಕೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಮಾಡ್ತಾರೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಪಕ್ಷವನ್ನೇ ಮತ್ತೆ ಸಂಘಟನೆ ಮಾಡುತ್ತೇವೆ. ಜನವರಿ ನಂತ್ರ ಇದಕ್ಕೆ ಮತ್ತಷ್ಟು ವೇಗ ಸಿಗುತ್ತದೆ. ಎಲ್ಲಾ ಸರ್ವೇಯನ್ನು ಮಾಡಿ ಟಿಕೆಟ್ ಹಂಚಿಕೆ ಆಗುತ್ತದೆ. ಲೋಕಸಭೆ ಗೆಲ್ಲುವ ಅಭ್ಯರ್ಥಿಗಳನ್ನ ಆಯ್ಕೆ ಮಾಡುತ್ತೇವೆ ಎಂದರು.