ಮೈಸೂರು: ಹಂಚ್ಯಾಗ್ರಾಮದಲ್ಲಿ ನಿರಂತರವಾಗಿ ಕಳವು ಪ್ರಕರಣಗಳು ನಡೆಯುತ್ತಲೇ ಇದ್ದು, ಬೆಳಗಿನಜಾವ ಗ್ರಾಮದ ಕೊಟ್ಟಿಗೆಯಲ್ಲಿದ್ದ 6 ಕುರಿಗಳನ್ನು ಖದೀಮರು ಕದೊಯ್ದಿದ್ದಾರೆ.
ಎರಡು ತಿಂಗಳ ಹಿಂದೆಯಷ್ಟೇ ಗ್ರಾಮದೊಳಗಿದ್ದ ಶ್ರೀ ಸೋಮೇಶ್ವರ ದೇವಾಲಯದ ಬೀಗ ಮುರಿದು ಹುಂಡಿ ಒಡೆದು ಹಣ ದೋಚಿ ಪರಾರಿಯಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಶ್ರೀನಿವಾಸ್ ಅವರ ಕೊಟ್ಟಿಗೆ ಮನೆಯ ಬಾಗಿಲ ಬೀಗ ಕುಯ್ದು ಒಳಗಿದ್ದ 6 ಕುರಿಗಳನ್ನು ಕದ್ದು ಹೊಯ್ದಿದ್ದಾರೆ.
ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.ಆದರೆ, ಗ್ರಾಮದಲ್ಲಿ ಕಾರು, ಟ್ರಾಕ್ಟರ್ ಗಳ ಬ್ಯಾಟರಿ ಕಳವು, ದ್ವಿಚಕ್ರ ವಾಹನ ಕಳವು, ದೇವಾಲಯ ಹುಂಡಿ ಹಣ ಕಳವು ಪ್ರಕರಣಗಳು ಸಹ ವರದಿಯಾಗಿದ್ದು, ಈಗ ಕುರಿಗಳ ಕಳವು ಮಾಡಿರುವುದು ಗ್ರಾಮಸ್ಥರ ಆಂತಕಕ್ಕೂ ಕಾರಣವಾಗಿದೆ. ಇಷ್ಟೆಲ್ಲಾ ಪ್ರಕರಣಗಳಿದ್ದರೂ ಪೊಲೀಸರು ಇನ್ನೂ ಅಲರ್ಟ್ ಆಗಿಲ್ವಾ ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ ಮೂಡಿದೆ