ಕೊಪ್ಪಳ : ಕಾಂಗ್ರೆಸ್ನವರು ಎಲ್ಲದಕ್ಕೂ ಬಿಜೆಪಿ ಕಡೆ ಬೊಟ್ಟು ಮಾಡ್ತಿದ್ದಾರೆ. ಕಾಂಗ್ರೆಸ್ನವರ ಮನೆಯಲ್ಲಿ ಮಗು ಹುಟ್ಟಿದ್ರೂ ಅದಕ್ಕೆ ಬಿಜೆಪಿಯವರೇ ಕಾರಣ ಅಂತಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವಿಧಾನಸಭಾ ಚುನಾವಣೆ ಕೆಟ್ಟ ಕನಸು ಎಂದು ಭಾವಿಸಿ, ಈ ರಾಜ್ಯದ ಜನ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡೋಕೆ ರೆಡಿಯಾಗಿದ್ದಾರೆ. ಲೋಕಸಭೆ ಚುನಾವಣೆಗೆ ನಾವು ಅಣಿಯಾಗುತ್ತಿದ್ದೆವೆ. 7 ತಂಡಗಳಾಗಿ ರಾಜ್ಯ ಪ್ರವಾಸ ಮಾಡ್ತಿದ್ದೀವಿ. ಎಲ್ಲಾ ಜಿಲ್ಲೆಗಳಲ್ಲಿ ನಮ್ಮ ಕಾರ್ಯಕರ್ತರು ಉತ್ಸಾದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಮೋದಿ ಸೋಲಿಸೋಕೆ ಆಗಲ್ಲ:
ಬಿಜೆಪಿ ಸೋಲಿಸಲು ವಿರೋಧಪಕ್ಷಗಳ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಮೊದಲೆನಲ್ಲಾ, ಅವರು ಏನೇ ಸಭೆ ಮಾಡಿದರೂ ಮೋದಿ ಸೋಲಿಸೋಕೆ ಆಗೋದಿಲ್ಲ. ಹಿಂದಿನ ತಪ್ಪು ನಾವೇ ಸರಿಪಡಿಸಬೇಕು. ಅದೊಂದು ಕೆಟ್ಟ ಕನಸು ಪದೇ-ಪದೇ ಯಾಕೆ ನೆನಪು ಮಾಡಿಕೊಳ್ಳಬೇಕು. ಯಾರೋ ಒಬ್ಬರು ಹೇಳಿಕೆ ಕೊಟ್ರು ಅಂತಾ ತಲೆಕೆಡಿಸಿಕೊಳ್ಳೋದಿಲ್ಲ ಎಂದು ತಿಳಿಸಿದ್ದಾರೆ
ಲೋಕಸಭೆಗೆ ಯಾರಿಗೆ ಟಿಕೆಟ್ ಕೊಡಬೇಕು ಅನ್ನೋದನ್ನ ಕೇಂದ್ರದ ನಾಯಕರು ತೀರ್ಮಾನ ಮಾಡ್ತಾರೆ. ಗ್ಯಾರಂಟಿಗಳನ್ನ ರಾಜ್ಯ ಸರ್ಕಾರ ಸರಿಯಾಗಿ ಜಾರಿ ಮಾಡ್ತಿಲ್ಲ. ರಾಜ್ಯದಲ್ಲಿ ಕೆಲವು ಕಡೆ ಕುಡಿಯುವ ನೀರಿಗೆ ಸಮಸ್ಯೆಯಾಗ್ತಿದೆ. ಅದರ ಬಗ್ಗೆ ಈ ಸರ್ಕಾರ ಗಮನ ಹರಿಸ್ತಿಲ್ಲ. ಸರ್ವರ್ ಹ್ಯಾಕ್ ಮಾಡಿದ್ರು ಅಂತಾ ಮಂತ್ರಿ ಹೇಳ್ತಾರೆ, ಇದು ನೀತಿಗೆಟ್ಟ ರಾಜಕೀಯ. ಇವಾಗ ಅಕ್ಕಿ ಕೊಡಲಿಲ್ಲ ಅಂತಾ ಕೇಂದ್ರದ ಮೇಲೆ ಆರೋಪ ಮಾಡ್ತಿದ್ದಾರೆ. ಎಲ್ಲದಕ್ಕೂ ಬಿಜೆಪಿ ಕಡೆ ಬೊಟ್ಟು ಮಾಡ್ತಿದ್ದಾರೆ. ಕಾಂಗ್ರೆಸ್ನವರ ಮನೆಯಲ್ಲಿ ಮಗು ಹುಟ್ಟಿದ್ರು ಅದಕ್ಕೆ ಕಾರಣ ಬಿಜೆಪಿಯವರು ಅಂತಾರೆ, ಇದು ತಾತ್ಕಾಲಿಕ ಎಂದು ಲೇವಡಿ ಮಾಡಿದ್ದಾರೆ.