ಆನಂದ್ ಕೆ.ಎಸ್
ಮೈಸೂರು : ಕಳೆದ ವಿಧಾನಸಭಾ ಚುನಾಣೆಯಲ್ಲಿ ಅನೇಕ ಬದಲಾವಣೆ ತಂದು ಕಾರ್ಯಕರ್ತರ ಮಾತಿಗೂ ಕ್ಯಾರೇ ಎನ್ನದ ಸೋತು ಸುಣ್ಣವಾಗಿದ್ದ ಬಿಜೆಪಿ ಹೈ ನಾಯಕರು ಈಗ ಮತ್ತದೇ ತಪ್ಪು ಮಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಮೈಸೂರು ಕೊಡಗು ಹಾಲಿ ಸಂಸದ ಪ್ರತಾಪ್ ಸಿಂಹರಿಗೆ ಟಿಕೆಟ್ ಡೌಟ್ ಅನ್ನೋ ಚರ್ಚೆಯೇ ಇದಕ್ಕೆ ಮತ್ತೊಂದು ನಿದರ್ಶನವಾಗಿದೆ. ಅಲ್ಲದೆ ಗೆಲ್ಲುವ ಕ್ಷೇತ್ರ ಸೋಲುತ್ತಾ ಎನ್ನುವ ಚರ್ಚೆ ಶುರುವಾಗಿದೆ.
ಅಚ್ಚರಿ ಅಭ್ಯರ್ಥಿ ಹಾಕುತ್ತೇವೆ. ನಾವು ಹೇಳಿದ್ದು ಮಾಡಿ ಎಂದಿದ್ದ ಹೈ ಕಮಾಂಡ್ ಮೋದಿಯವರನ್ನು ಬೀದಿ ಬೀದಿ ಸುತ್ತಿಸಿ ಗೆಲ್ಲುವ ಕನಸು ಕಂಡಿತ್ತು. ಆದರೆ ರಾಜ್ಯದಲ್ಲಿ ಕಾರ್ಯಕರ್ತರ ಹಾಗೂ ಜನರ ನಾಡಿ ಮಿಡಿತ ಅರಿಯದೆ ವಿಧಾನಸಭೆಯಲ್ಲಿ ಬಿಜೆಪಿ ಮಕಾಡೆ ಮಲಗಿತ್ತು. ಈ ಬಾರಿಯೂ ಕೂಡ ಅನೇಕ ಬದಲಾವಣೆ ತರಲು ಹೊರಟಿರುವ ಬಿಜೆಪಿ ಕೆಲ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಸೂಚನೆ ನೀಡಿದೆ.
ಮೈಸೂರು ಕೊಡಗು ಜನಪ್ರಿಯ ಸಂಸದ ಪ್ರತಾಪ್ ಸಿಂಹರಿಗೆ ಟಿಕೆಟ್ ಕೈ ತಪ್ಪಿಸುವ ಸಾದ್ಯತೆ ಹೆಚ್ಚುತ್ತಿದ್ದಂತೆ ಕಾರ್ಯಕರ್ತರು ಕೊತ ಕೊತ ಕುದಿಯುತ್ತಿದ್ದಾರೆ. ಯಾವುದೇ ಕೆಲಸ ಮಾಡದೆಯಿರುವ ಸಂಸದರಿಗೆ ಟಿಕೆಟ್ ಕೊಡಬೇಡಿ. ಆದರೆ ಪ್ರತಾಪ್ ಸಿಂಹ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದಾರೆ ಅವರನ್ನು ಕೈಬಿಡಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಪ್ರತಾಪ್ ಸಿಂಹ ಮೈಸೂರಿನಲ್ಲಿ ಹೆಚ್ಚು ಅಂತರದಲ್ಲಿ ಗೆಲ್ಲುತ್ತಾರೆ. ಅವರನ್ನು ಬಿಟ್ಟು ಬೇರೆ ಯಾರಿಗಾದರೂ ಟಿಕೆಟ್ ಕೊಟ್ಟರೆ ನಾವು ಮತ ಹಾಕುವುದಿಲ್ಲ ಎಂದು ಅವರ ಅಭಿಮಾನಿಗಳು ಬಿಜೆಪಿ ಕಾರ್ಯಕರ್ತರು ಅಭಿಯಾನ ನಡೆಸಿದ್ದಾರೆ. ಗೆಲ್ಲುವ ಕ್ಷೇತ್ರದಲ್ಲಿ ಇಂತಹ ಪ್ರಯೋಗದ ಅವಶ್ಯಕತೆಯಿಲ್ಲ. ಸುಖ ಸುಮ್ಮನೆ ನಿಮ್ಮ ರಾಜಕೀಯ ಬೆಳೆಗಳನ್ನು ಬೇಯಿಸಿ ವಿಧಾನಸಭೆಯಲ್ಲಿ ಸೋಲುಂಡಿದ್ದಿರಿ ಲೋಕಸಭಾ ಚುನಾವಣೆಯಲ್ಲಿ ಇಂತಹ ನಾಟಕ ಅಡಬೇಡಿ ಎಂದು ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರು ಕಿಡಿಕಾರಿದ್ದಾರೆ
ಇದರ ಮದ್ಯೆ ಬಿಜೆಪಿ 2ನೇ ಪಟ್ಟಿ ರಿಲೀಸ್ ಆಗುವ ಸಾಧ್ಯತೆಯಿದ್ದು ರಾಜ್ಯದ ಮೊದಲ ಲಿಸ್ಟ್ ಇದಾಗಲಿದೆ.
ಮೊದಲ ಹಂತದಲ್ಲಿ 15 ರಿಂದ 17 ಅಭ್ಯರ್ಥಿಗಳ ಘೋಷಣೆ ಆಗುವ ನಿರೀಕ್ಷೆ ಇದೆ. ಬೆಂಗಳೂರು ಗ್ರಾಮಾಂತರಕ್ಕೆ ಡಾ.ಮಂಜುನಾಥ್ ಬಹುತೇಕ ಖಚಿತ ಎನ್ನಲಾಗಿದೆ. ವಿರೋಧದ ನಡುವೆಯೂ ಶೋಭಾ ಕರಂದ್ಲಾಜೆಗೂ ಟಿಕೆಟ್ ಫಿಕ್ಸ್ ಅಂತ ಹೇಳಲಾಗಿದೆ. ಮೈಸೂರಿನಿಂದ ಪ್ರತಾಪ್ ಸಿಂಹ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ಗೂ ಟಿಕೆಟ್ ಡೌಟ್ ಎನ್ನಲಾಗಿದೆ. ಈ ನಡುವೆ ಬೆಂಗಳೂರು ಉತ್ತರ, ಉಡುಪಿ-ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಬೀದರ್, ರಾಯಚೂರು, ಉತ್ತರ ಕನ್ನಡ, ಕೋಲಾರ, ಚಿತ್ರದುರ್ಗ, ದಕ್ಷಿಣ ಕನ್ನಡ, ಚಾಮರಾಜನಗರ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಇನ್ನೂ ಇತ್ಯರ್ಥವಾಗಿಲ್ಲ.
ಸಂಭಾವ್ಯ ಅಭ್ಯರ್ಥಿಗಳು:
ಬೆಂಗಳೂರು ಗ್ರಾಮಾಂತರ- ಡಾ.ಮಂಜುನಾಥ್
ಮೈಸೂರು- ಯದುವೀರ್ ಒಡೆಯರ್
ಬೆಂ. ದಕ್ಷಿಣ -ತೇಜಸ್ವಿ ಸೂರ್ಯ
ಬೆಂ. ಕೇಂದ್ರ- ಪಿ.ಸಿ.ಮೋಹನ್
ಬಳ್ಳಾರಿ- ಶ್ರೀರಾಮುಲು
ಹಾವೇರಿ- ಬಸವರಾಜ ಬೊಮ್ಮಾಯಿ
ಕಲಬುರಗಿ- ಉಮೇಶ್ ಜಾಧವ್
ಬಾಗಲಕೋಟೆ- ಪಿ.ಸಿ ಗದ್ದಿಗೌಡರ್
ವಿಜಯಪುರ- ರಮೇಶ್ ಜಿಗಜಿಣಗಿ
ಚಿಕ್ಕೋಡಿ- ಅಣ್ಣಾಸಾಹೇಬ್ ಜೊಲ್ಲೆ
ಶಿವಮೊಗ್ಗ- ಬಿ.ವೈ.ರಾಘವೇಂದ್ರ
ಬೆಳಗಾವಿ- ಜಗದೀಶ್ ಶೆಟ್ಟರ್
ಧಾರವಾಡ- ಪ್ರಲ್ಹಾದ್ ಜೋಶಿ
ಕೊಪ್ಪಳ- ಸಂಗಣ್ಣ ಕರಡಿ