500 ವರ್ಷಗಳ ಬಳಿಕ ಭಗವಾನ್ ರಾಮ ಸೋಮವಾರ ತನ್ನ ವಾಸಸ್ಥಾನಕ್ಕೆ ಮರಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸಾರಥ್ಯದಲ್ಲಿ ಶಾಸ್ತ್ರೋಕ್ತವಾಗಿ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯಾಗಿದೆ ಇದಾದ ಬಳಿಕ ಸಾವರ್ಜನಿಕರ ದರ್ಶನಕ್ಕೆ ಅನುಮತಿ ನೀಡಲಾಯಿತು.
ಸಾರ್ವಜನಿಕರಿಗೆ ರಾಮಮಂದಿರದಲ್ಲಿ ಬಾಲರಾಮನ ದರ್ಶನಕ್ಕೆ ಅವಕಾಶ ನೀಡುತ್ತಿದ್ದಂತೆಯೇ ಭಕ್ತರ ದಂಡೇ ಹರಿದು ಬರಲಾರಂಭಿಸಿದೆ. ಸೋಮವಾರ ರಾತ್ರಿಯಿಂದಲೇ ಅಯೋಧ್ಯಾಧಾಮದಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಅಲ್ಲದೇ ತೀವ್ರ ಚಳಿಯನ್ನೂ ಲೆಕ್ಕಿಸದೇ ದೇವಸ್ಥಾನದ ಹೊರಗಡೆಯೂ ಸಾವಿರಾರು ಜನ ಜಮಾಯಿಸತೊಡಗಿದರು.
ತಡರಾತ್ರಿಯಿಂದಲೇ ರಾಮ ಮಂದಿರದ ಮುಖ್ಯ ದ್ವಾರದ ಹೊರಗೆ ಭಕ್ತಾದಿಗಳ ಉದ್ದನೆಯ ಸಾಲು ಆರಂಭವಾಗಿತ್ತು. ಬೆಳಗ್ಗಿನ ಜಾವ 2 ಗಂಟೆಯಿಂದಲೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಾರಂಭಿಸಿದರು. ನೆರೆದಿದ್ದ ಜನರು ದ್ವಾರದ ಮುಂದೆ ʼಜೈ ಶ್ರೀ ರಾಮ್ʼ ಎಂದು ಘೋಷಣೆ ಕೂಗುತ್ತಾ ದೇಗುಲದೊಳಗೆ ಪ್ರವೇಶಿಸುತ್ತಿದ್ದಾರೆ. ದೇಶಾದ್ಯಂತ ಭಕ್ತರನ್ನು ಒಟ್ಟುಗೂಡಿಸುವ ಪ್ರಕ್ರಿಯೆ ಮುಂದುವರಿದಿದೆ. ಜೊತೆಗೆ ಅಯೋಧ್ಯೆಯ ಸ್ಥಳೀಯ ನಿವಾಸಿಗಳು ಕೂಡ ಬಾಲರಾಮನ ದರ್ಶನ ಮತ್ತು ಪೂಜೆಗಾಗಿ ಆಗಮಿಸುತ್ತಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ಸುಮಾರು 2 ವಾರ ಇರುವಾಗಲೇ ಅಯೋಧ್ಯೆಯಲ್ಲಿ ಹೋಟೆಲ್ ಬುಕಿಂಗ್ 80%ರಷ್ಟು ಹೆಚ್ಚಾಗಿತ್ತು. ಹೋಟೆಲ್ನಲ್ಲಿ ಒಂದು ದಿನದ ಕೋಣೆಯ ಬೆಲೆ ಸಾರ್ವಕಾಲಿಕ ಗರಿಷ್ಠ ದರವನ್ನು ತಲುಪಿದೆ, ಅದು ಈಗ ಐದು ಪಟ್ಟು ಹೆಚ್ಚಾಗಿದೆ. ಕೆಲ ಐಷಾರಾಮಿ ಕೊಠಡಿಗಳ ಬಾಡಿಗೆ 1 ಲಕ್ಷ ರೂ.ಗೆ ಏರಿದೆ. ವಿಶೇಷವೆಂದರೆ ಇಷ್ಟು ದರ ಏರಿಕೆಯ ನಡುವೆಯೂ ಹೋಟೆಲ್ ಬುಕ್ಕಿಂ ಗ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.