ದೆಹಲಿ : ಯತ್ನಾಳ್ ಎಲ್ಲೆಲ್ಲಿ ಭಾಷಣ ಮಾಡಿದ್ದಾರೆ ಅಲ್ಲಿ ಯಾರು ಗೆದ್ದಿಲ್ಲ. ದೀಪ ಆರುವಾಗ ಜೋರಾಗಿ ಉರಿಯುತ್ತೆ, ಈಗ ಜೋರಾಗಿ ಉರಿಯುತ್ತಿದೆ ಅಷ್ಟೇ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಬಿಜಾಪುರದಲ್ಲಿ ಎಷ್ಟು ಜನರನ್ನು ಯತ್ನಾಳ್ ಗೆಲ್ಲಿಸಿದ್ದಾರೆ? ಶಕ್ತಿ ಇದ್ದರೇ ಬಿಜಾಪುರದಲ್ಲಿ 2-3 ಸ್ಥಾನ ಗೆಲ್ಲಿಸಬೇಕಿತ್ತು. ಇವರ ನಾಯಕತ್ವ ಎಂತದ್ದು ಎನ್ನುವುದು ಗೊತ್ತಿದೆ. ಅವರು ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ ಎಂದರು
ರಾವಣ ಶಿವಭಕ್ತ. ಸೀತೆಯನ್ನು ಅಪಹರಣ ಮಾಡಿದ ಮೇಲೆ ಅನವತಿ ಆಯ್ತು. ಪಾಪದ ಕೊಡ ತುಂಬಿದ ಮೇಲೆ ಎಲ್ಲವೂ ಮುಗಿಯಿತು. ಇವರದ್ದು ಪಾಪದ ಕೊಡ ತುಂಬಲು ಬಂದಿದೆ. ಇನ್ನು ಬಹಳ ದಿನ ನಡೆಯುವುದಿಲ್ಲ ಎಂದು ಹೇಳಿದರು.
ರಾವಣ ನನ್ನನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದಿದ್ದ. ಆದರೆ ಆತನ ಕಥೆ ಏನಾಯಿತು? ನಾನೇ ಎಲ್ಲ ಅಂದವರಿಗೆ ಏನಾಗಿದೆ? ಇವರ ಕಥೆಯೂ ಹಾಗೇ ಆಗುತ್ತದೆ. ನಾಲ್ಕು ಜನರು ಚಪ್ಪಾಳೆ ಹೊಡೆದರೆ ನಾಯಕ ಅಲ್ಲ. ಲಕ್ಷಾಂತರ ಜನರನ್ನು ಸೇರಿಸಿ ಎಂದಾದರೂ ಕಾರ್ಯಕ್ರಮ ಮಾಡಿದ್ದಾರಾ?. ಸಮಾಜಕ್ಕೆ ಅವರ ಕೊಡುಗೆ ಏನು? ಖರ್ಚು ಮಾಡದೇ ಬೇರೆಯವರು ಆಯೋಜನೆ ಮಾಡಿದ ಕಾರ್ಯಕ್ರದಲ್ಲಿ ಬಂದು ಮಾತನಾಡುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ವಿಜಯೇಂದ್ರ ಅವರನ್ನು ಹೈಕಮಾಂಡ್ ರಾಜ್ಯಧ್ಯಕ್ಷರನ್ನಾಗಿ ಮಾಡಿದೆಯೇ ಹೊರತು ಯಡಿಯೂರಪ್ಪ ಅಲ್ಲ. ವಿಜಯೇಂದ್ರ ಪ್ರತಿಭೆ ನೋಡಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರಿಗೆ ನೀಡಿದ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಈ ಎಲ್ಲಾ ಕೆಲಸ ಗುರುತಿಸಿ ಜವಾಬ್ದಾರಿ ನೀಡಿದ್ದಾರೆ. ಅಶೋಕ್ ಎಂಟು ಬಾರಿ ಶಾಸಕರು, ಸಚಿವರು ಡಿಸಿಎಂ ಆಗಿದ್ದರು. ಸಂಘಟನೆ ಎಲ್ಲವೂ ನೋಡಿ ಹುದ್ದೆ ನೀಡಿದ್ದಾರೆ. ಇದನ್ನು ಯತ್ನಾಳ್ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ನಿರಾಣಿ ಕಿಡಿಕಾರಿದರು.