ಕೋಲಾರ : ರಾಜ್ಯದ ಜನ ಕಾಂಗ್ರೆಸ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ 5 ವರ್ಷಗಳ ಕಾಲ ನಡೆಯಲಿ ಬಿಡಿ. ಸರ್ಕಾರಕ್ಕೆ ಧಕ್ಕೆ ತರುವ ಕೆಲಸ ಯಾರೂ ಮಾಡಬಾರದು ಎಂದು ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಕೋಲಾರದ ಮುಳಬಾಗಿಲಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಸರ್ಕಾರ ಬೀಳುತ್ತೆ ಅನ್ನೋದನ್ನ ನಾನು ಒಪ್ಪಲ್ಲ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಆ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ 5 ವರ್ಷಗಳ ಕಾಲ ನಡಿಯಲಿ ಬಿಡಿ. ಇನ್ನೂ ಯಾವುದೇ ಆಪರೇಷನ್ ಕಮಲ ಮಾಡುವುದಕ್ಕೆ ಹೋಗುವುದಿಲ್ಲ, ಬಹುಮತದೊಂದಿಗೆ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅದಕ್ಕೆ ಧಕ್ಕೆ ತರುವ ಕೆಲಸ ಯಾರೂ ಮಾಡಬಾರದು ಎಂದು ನುಡಿದಿದ್ದಾರೆ.
ಡಿಕೆಶಿ ಸಿಬಿಐ ಕೇಸ್ ವಾಪಸ್ ವಿಚಾರ ಕುರಿತು ಮಾತನಾಡಿದ ಅವರು, ಸಿಬಿಐ ತನಿಖೆ ಆಗಬೇಕಿದ್ದ ಡಿಕೆ ಶಿವಕುಮಾರ್ ಅವರ ಪ್ರಕರಣವನ್ನ ಕ್ಯಾಬಿನೆಟ್ ವಾಪಸ್ ಪಡೆಯಲು ಅನುಮತಿ ನೀಡಿರುವುದು ನಮಗೆ ಭಯವಾಗಿದೆ. ಸರ್ಕಾರವನ್ನ ಬೊಂಬೆಯಂತೆ ಅವರು ನಡೆಸಿಕೊಳ್ಳುತ್ತಿದ್ದು, ಸರ್ಕಾರವೇ ಅವರಿಗೆ ತಲೆಬಾಗಿದೆಯಾ ಅನ್ನೋ ಪ್ರಶ್ನೆ ಮೂಡಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ
ಡಿಕೆಶಿ ಅವರಿಗೆ ಕಾನೂನಿನ ಬಗ್ಗೆ ಗೌರವ ಇದ್ದಿದ್ದರೇ, ಪ್ರಕರಣದಿಂದ ನ್ಯಾಯಯುತವಾಗಿ ಹೊರಬರುವ ವಿಶ್ವಾಸ ಇದ್ದಿದ್ದರೇ ಈ ರೀತಿಮಾಡುತ್ತಿರಲಿಲ್ಲ. ಕ್ಯಾಬಿನೆಟ್ ನಲ್ಲಿ ಈ ರೀತಿಯ ವಿಚಾರಗಳೇ ಚರ್ಚೆಗೆ ಬರುವುದಿಲ್ಲ. ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಇಂತಹ ವಿಷಯ ಚರ್ಚೆಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ