ಚಾಮರಾಜನಗರ : ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ರಾಜ್ಯ ಸರ್ಕಾರ ಇದುವರೆಗೆ ಬರದ ಬಗ್ಗೆ ಸರಿಯಾಗಿ ಮಾಹಿತಿ ಸಂಗ್ರಹಿಸದೇ ಒಂದೊಂದು ಬಾರಿ ಒಂದೊಂದು ವರದಿ ಕೊಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಟೀಂ ಬರ ಅಧ್ಯಯನ ನಡೆಸಿದ್ದು ನಾವು ಇಂದು ಚಾಮರಾಜನಗರದಲ್ಲಿ ಬರ ಅಧ್ಯಯನ ಆರಂಭಿಸಿದ್ದೇವೆ. ನಾವು ಬಂದ ಮೇಲೆ ನಮ್ಮ ಕಾಲ್ಗುಣದಿಂದ ಈಗ ಮಳೆ ಬಂದಿದೆ. ನಾಳೆ ಮೈಸೂರಿನಲ್ಲಿ ಅಧ್ಯಯನ ಮಾಡುತ್ತೇವೆ. ರಾಜ್ಯಕ್ಕೆ ಬರಗಾಲ ಸಿಎಂ ಸಿದ್ದರಾಮಯ್ಯ ಕೊಡುಗೆ, ಸಿಎಂ ಕಾಲ್ಗುಣದಿಂದ ರಾಜ್ಯಕ್ಕೆ ಬರ ಬಂದಿದೆ. ಈಗಾಗಲೇ ಬೆಳೆ ನಷ್ಟ ಅನುಭವಿಸಿರುವ ರೈತರ ಹೊಲಗಳಿಗೆ ಭೇಟಿ ನೀಡಿದ್ದೇವೆ. ಸಾಕಷ್ಟು ಕಡೆ ಬೆಳೆ ನಷ್ಟ ಆಗಿದೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಬರ ವಿಚಾರದಲ್ಲಿ ನೊಂದ ರೈತರ ನೆರವಿಗೆ ಸರ್ಕಾರ ಮುಂದಾಗಿಲ್ಲ ಎಂದರು.
ಎಸ್ಸಿಪಿ/ಟಿಎಸ್ಪಿ ಸೇರಿ ಎಲ್ಲ ಹಣವನ್ನು ಗ್ಯಾರೆಂಟಿ ಯೋಜನೆಗೆ ಬಳಸಿಕೊಂಡಿದ್ದಾರೆ. ಡಿಸೆಂಬರ್ ವೇಳೆಗೆ ರಾಜ್ಯ ಸರ್ಕಾರ ದಿವಾಳಿ ಆಗುತ್ತದೆ ಎಂದರು. ಸರ್ಕಾರಿ ನೌಕರರಿಗೂ ಸಂಬಳ ಕೂಡ ಕೊಡಲು ಸರ್ಕಾರದಲ್ಲಿ ಹಣ ಇಲ್ಲ. ಸಿಎಂ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಮತ್ತೊಬ್ಬರು ಸಿಎಂ ಆಗುತ್ತೇನೆ ಎಂಬ ಕನಸಿನಲ್ಲಿದ್ದಾರೆ. ಹೈಬಿಪಿ ಹೈ ಶುಗರ್ನಿಂದಾಗಿ ಜಾಮೀನು ಪಡೆದು ಹೊರಗಿದ್ದಾರೆ. ಆರೋಗ್ಯ ಸರಿಹೋದ ಕೂಡಲೇ ಮತ್ತೆ ಡಿಕೆ ಶಿವಕುಮಾರ್ ಜೈಲಿಗೆ ಹೋಗುತ್ತಾರೆ. ಆ ನಿಟ್ಟಿನಲ್ಲಿ ವಕೀಲರ ತಂಡ ದೆಹಲಿಗೆ ಹೋಗಿದೆ. ವಕೀಲರ ತಂಡ ಯಾವ ಫ್ಲೈಟ್ ನಲ್ಲಿ ಹೋಗಿದ್ದಾರೆ ಎಂಬುದನ್ನು ಸಿಎಂ ಹೇಳಬೇಕು ಪರೋಕ್ಷವಾಗಿ ಡಿಕೆಶಿಯನ್ನು ಜೈಲಿಗೆ ಕಳುಹಿಸಲು ಸಿಎಂ ಪ್ಲಾನ್ ಮಾಡುತ್ತಿದ್ದಾರೆ ಎಂದು ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.