ಚಾಮರಾಜನಗರ : ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚು ಭಾರ ಹೊತ್ತ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಿದ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ಅರಣ್ಯ ಪ್ರದೇಶದ ಆಸು ಪಾಸಿನಲ್ಲಿ ಹೆಚ್ಚು ಭಾರದ ಸರಕುಗಳನ್ನು ಹೊತ್ತ ವಾಹನಗಳು ನಿಲುಗಡೆಯಾಗಿರುವ ಹಿನ್ನಲೆಯಲ್ಲಿ ಟ್ರಾಫಿಕ್ ಜಾಮ್ ಆಗಿರುವ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಕಾರ್ಯಪಾಳ್ಯಂ ಬಳಿ ನಡೆದಿದೆ.
ತಮಿಳುನಾಡಿನ ಲಾರಿ ಮಾಲೀಕರ ಸಂಘದವರು ಈರೋಡ್ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಅಧಿಕ ಭಾರ ಹೊತ್ತ ಸರಕು ಸಾಗಾಣಿಕೆ ವಾಹನಗಳು ಕಾನೂನು ಬಾಹಿರವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿದ್ದು, ಇದರ ಬಗ್ಗೆ ಪರಿಶೀಲನೆ ನಡೆಸಿ ದಂಡ ವಿಧಸಿಬೇಕೆಂದು ಕೋರಿದ್ದರು.
ಲಾರಿ ಮಾಲೀಕರ ಸಂಘದವರ ಮನವಿಯಂತೆ ತಮಿಳುನಾಡಿನ ಈರೋಡಿನ ಜಿಲ್ಲಾಡಳಿತದ ಸೂಚನೆಯಂತೆ ಪೊಲೀಸರು ಕಾರ್ಯಪಾಳ್ಯಂ , ಹಾಸನೂರು ಬಳಿ , ನಿಗಧಿತ ಪ್ರಮಾಣಕ್ಕಿಂತ ಹೆಚ್ಚು ಭಾರ ಹೊತ್ತ ಸರಕು ಸಾಗಾಣಿಕೆ ವಾಹನಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇದರಿಂದಾಗಿ ಕಾಡಂಚಿನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಾಗವಾಗಿ ಸಂಚಾರ ಮಾಡಲಾಗದ ಸ್ಥಿತಿ ಬಂದಿದೆ.
ಸಾಲುಗಟ್ಟಿ ನಿಂತ ವಾಹನಗಳಿಂದಾಗಿ ಟ್ರಾಫಿಕಾ ಜಾಮ್ ಆಗಿದ್ದು, ಕರ್ನಾಟಕ ತಮಿಳುನಾಡು ನಡುವಿನ ಸಂಚಾರ ಕೊಂಚ ಪ್ರಮಾಣದಲ್ಲಿ ನಿಧಾನವಾಗುತ್ತಿದೆ.
ಕರ್ನಾಟಕ ತಮಿಳುನಾಡು ನಡುವೆ ಸಂಪರ್ಕದ ದಿಂಡಿಗಲ್ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 16.2 ಟನ್ ತೂಕದ ಸರಕು ಹೊತ್ತ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಲಾಗುತ್ತಿದ್ದು, ಇದಕ್ಕಿಂತ ಹೆಚ್ಚು ತೂಕ ಹೊತ್ತ ವಾಹನಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಡುತ್ತಿಲ್ಲ .