ಬೆಂಗಳೂರು : ನಗರದಲ್ಲಿ ಮಾಜಿ ಗುತ್ತಿಗೆದಾರರ ಮೇಲೆ ಐಟಿ ದಾಳಿ ಸಂಬಂಧಿಸಿದಂತೆ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಎಕ್ಸ್ (ಟ್ವೀಟ್) ಮಾಡಿರುವ ಅವರು, ಮಹದೇವಪ್ಪನ ದುಡ್ಡು, ಕಾಕಪಾಟಿಲನ ದುಡ್ಡು, ದಯಾನಂದನ ದುಡ್ಡು ಎಂದು ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ! ಮಹದೇವಪ್ಪ ನ ದುಡ್ಡು, ಕಾಕಪಾಟಿಲನ ದುಡ್ಡು, ದಯಾನಂದನ ದುಡ್ಡು, 1/4ರಷ್ಟು ರಾಜಸ್ಥಾನಕ್ಕೆ, 1/4ರಷ್ಟು ಮಧ್ಯಪ್ರದೇಶಕ್ಕೆ,1/4ರಷ್ಟು ತೆಲಂಗಾಣಕ್ಕೆ,1/4 ರಷ್ಟು ಛತ್ತೀಸಘಡಕ್ಕೆ!! ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ನಾಯಕಿ, ಮಾಜಿ ಕಾರ್ಪೋರೇಟೋರ್ ಅಶ್ವತ್ಥಮ್ಮ ಅವರ ಪತಿ ಅಂಬಿಕಾಪತಿಯ ಮಗಳ ಮನೆಯಲ್ಲಿ ಐಟಿ ಅಧಿಕಾರಿಗಳು ಸೀಜ್ ಮಾಡಿರುವುದು 42 ಕೋಟಿ ಹಣ! ಈತ ಯಾರ “ಚಿರಂಜೀವಿ” ಯವರ ಪರವಾಗಿ ಹಣ ಸಂಗ್ರಹ ಮಾಡುತ್ತಿದ್ದ ಎಂದು ಗುತ್ತಿಗೆದಾರರ ಬಳಿ ಕೇಳಿದರೆ ನಿಜ ಹೊರಬರಬಹುದು. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನೇ ಸರ್ಕಾರದ ಪರವಾಗಿ ವಸೂಲಿಗೆ ಇಳಿದರೆ, ಗುತ್ತಿಗೆದಾರರನ್ನು ಕಾಪಾಡುವವರು ಯಾರು? ಈ ಹಣ ಯಾರದ್ದು ಎಂಬ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.
ಜೊತೆಗೆ ಸರ್ಕಾರದ ಮುಂದ 6 ಪ್ರಶ್ನೆಗಳ ಮುಂದಿಟ್ಟಿದ್ದಾರೆ. ಈ ಐಟಿ ರೇಡ್ ನಲ್ಲಿ ಕಾಂಗ್ರೆಸ್ ಏಜಂಟ್ ಅಂಬಿಕಾಪತಿಯ ಮನೆಯಲ್ಲಿ ದೊರೆತ 42 ಕೋಟಿ ಹಣದ ಮೂಲವನ್ನು ಹುಡುಕುವುದು ಬಹಳ ಸುಲಭ. ಬಿಬಿಎಂಪಿ ಬಿಡುಗಡೆ ಮಾಡಿರುವ 650 ಕೋಟಿ ಅನುದಾನ ಪಡೆದಿರುವ ಗುತ್ತಿಗೆದಾರರು ಯಾರು? ಅವರ ಹಿನ್ನಲೆ ಏನು? ಬಾಕಿ ಬಿಲ್ಲುಗಳ ವಿವರ! 650 ಕೋಟಿ ರೂಗಳಿಗೆ ಎಷ್ಟು ಪರ್ಸೆಂಟೇಜ್ ಫಿಕ್ಸ್ ಮಾಡಲಾಗಿತ್ತು?, ಈ ಹಣ ತಮಿಳುನಾಡಿನಿಂದ ತೆಲಂಗಾಣಕ್ಕೆ ಕಳುಹಿಸಲು ಯಾಕೆ ಯೋಜನೆ ಮಾಡಲಾಗಿತ್ತು? ತೆಲಂಗಾಣಕ್ಕೆ ಕಳುಹಿಸುವುದಾದರೆ ಚುನಾವಣೆಗಾಗಿ ಅಲ್ಲವೇ?, ಕುಮಾರಕೃಪಾ ಗೋಡೆಗಳನ್ನು ಕೇಳಿದರು ಹೇಳುವುದು ಈ ಹಣ ನೀಡಿರುವ ಸುಮಾರು 23 ಗುತ್ತಿಗೆದಾರರು ಯಾರೆಂದು!, ಕೆಂಪಣ್ಣ ಆಂಡ್ ಕಂಪನಿಗೆ ಈ ಮಾಹಿತಿ ಇಲ್ಲವಾ? ಎಂದು ಪ್ರಶ್ನಿಸಿದ್ದಾರೆ.

