ಮೈಸೂರು : ದಶಪಥ ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಇಂದಿನಿಂದ ಎಕ್ಸ್ಪ್ರೆಸ್ ಹೈವೇನಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ಸೇರಿ ಕೆಲ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಬೈಕ್, ಆಟೋ, ಟ್ರ್ಯಾಕ್ಟರ್ಗಳು ಇಂದಿನಿಂದ ಸರ್ವೀಸ್ ರಸ್ತೆಯಲ್ಲೇ ಸಂಚರಿಸಲು ಅವಕಾಶ ಕಲ್ಪಿಸಿದ್ದು, ನಿಯಮ ಉಲ್ಲಂಘಿಸಿದ್ರೆ ದುಬಾರಿ ದಂಡ ಬೀಳಲಿದೆ.
ದಶಪಥ ಹೆದ್ದಾರಿಯಲ್ಲಿ ಅಪಘಾತ ಕೇಸ್ಗಳು ಕಡಿಮೆ ಮಾಡಲು ಹೆದ್ದಾರಿ ಪ್ರಾಧಿಕಾರ ಹೊಸ ರೂಲ್ಸ್ ಜಾರಿ ಮಾಡಿದೆ. ಇಂದಿನಿಂದ ದಶಪಥ ಹೆದ್ದಾರಿಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ಸೇರಿ ಕೆಲ ವಾಹನಗಳಿಗೆ ನಿರ್ಬಂಧಿಸಲಾಗಿದೆ. ಬೈಕ್ ಹಾಗೂ ಮೂರು ಚಕ್ರದ ವಾಹನಗಳಿಂದ ಅಪಘಾತ ಸಂಖ್ಯೆ ಹೆಚ್ಚಳವಾಗಿರುವ ಕುರಿತು ವರದಿ ಸಂಗ್ರಹಿಸಿರೋ ಹೆದ್ದಾರಿ ಪ್ರಾಧಿಕಾರ ಈ ನಿರ್ಧಾರ ಕೈಗೊಂಡಿದೆ
ಯಾವ್ಯಾವ ವಾಹನಗಳಿಗೆ ನಿರ್ಬಂಧ?
– ಮೋಟಾರ್ ಸೈಕಲ್ – ಸ್ಕೂಟರ್ ಮತ್ತು ಇತರೆ ದ್ವಿಚಕ್ರ ವಾಹನ
– ತ್ರಿಚಕ್ರ ವಾಹನ – ಆಟೋ, ಇ-ಕಾರ್ಟ್ ವಾಹನಗಳು
– ಮೋಟಾರು ರಹಿತ ವಾಹನಗಳು, ಸೈಕಲ್ಗಳು
– ಟ್ರ್ಯಾಕ್ಟರ್ಗಳು, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ವಾಹನಗಳು
ನಿಯಮ ಮೀರಿ ಹೆದ್ದಾರಿಯಲ್ಲಿ ಸಂಚಾರ ಮಾಡಿದ್ರೆ 500 ರೂ. ದಂಡ ಬೀಳಲಿದೆ. ನಿರ್ಬಂಧಿಸಲಾದ ವಾಹನಗಳು ಹೆದ್ದಾರಿಯಲ್ಲಿ ಸಂಚರಿಸಿ ಅಪಘಾತವಾದರೆ ವಿಮೆ ಅನ್ವಯ ಆಗಲ್ಲ. ರಾಮನಗರ ವ್ಯಾಪ್ತಿಯ 9 ಎಂಟ್ರಿ, ಎಕ್ಸಿಟ್ಗಳಲ್ಲೂ ಪೊಲೀಸರು ತಪಾಸಣೆ ನಡೆಸಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಿಯಂತ್ರಣ ಕಾಯ್ದೆ 2002ರ ಅನ್ವಯ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ. ಎಕ್ಸ್ಪ್ರೆಸ್ ವೇನಲ್ಲಿ ಸಂಚರಿಸುವ ವಾಹನಗಳಿಗೆ ಸ್ಪೀಡ್ ಲಿಮಿಟ್ ಇರುತ್ತದೆ. ಪ್ರತಿ ಗಂಟೆಗೆ 80 ರಿಂದ 100 ಕಿ.ಮೀ ವೇಗ ಮಿತಿ ನಿಗದಿ ಪಡಿಸಲಾಗಿದೆ. ಲೇನ್ ಡಿಸಿಪ್ಲೀನ್, ಸೀಟ್ ಬೆಲ್ಟ್, ವೇಗ ಮಿತಿ ನಿಯಮವಿದೆ. ಡ್ರಂಕ್ ಅಂಡ್ ಡ್ರೈವ್ ಕುರಿತು ಪೊಲೀಸರು ತೀವ್ರ ತಪಾಸಣೆ ನಡೆಸಲಿದ್ದಾರೆ.
ಹೆದ್ದಾರಿ ಬೈಕ್ ಹಾಗೂ ಆಟೋಗಳಿಗೆ ಸರ್ವೀಸ್ ರಸ್ತೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಹಲವೆಡೆ ಸರ್ವೀಸ್ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಇನ್ನೂ ಕೆಲವೆಡೆ ಸರ್ವೀಸ್ ರಸ್ತೆ ನಿರ್ಮಾಣ ಆಗಿಲ್ಲ. ಕೆಲವೆಡೆ ಡ್ರೈನೇಜ್ ನಿರ್ಮಾಣ ಮಾಡದೇ ರಸ್ತೆಯಲ್ಲಿ ನೀರು ನಿಲ್ಲುತ್ತಿದೆ. ಬೀದಿ ದೀಪಗಳಿಲ್ಲದೇ ರಾತ್ರಿ ಸಂಚಾರ ಕಷ್ಟಕರವಾಗಿದೆ. ಈ ಎಲ್ಲಾ ನ್ಯೂನತೆಗಳ ಸರಿಮಾಡುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಪೊಲೀಸ್ ಇಲಾಖೆಯಿಂದಲೂ ಪತ್ರ ಬರೆಯಲಾಗಿದೆ.
ದಶಪಥ ಹೆದ್ದಾರಿಯಲ್ಲಿ ಹೊಸ ನಿಯಮ ಜಾರಿ ಮಾಡಿರೋ ಪ್ರಾಧಿಕಾರದ ನಡೆಗೆ ವಾಹನ ಸವಾರರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇಂದಿನಿಂದ ಬೈಕ್ ಹಾಗೂ ಆಟೋ ಸರ್ವೀಸ್ ರಸ್ತೆ ಬಳಸಬೇಕಿದೆ. ನಿಮಯ ಉಲ್ಲಂಘಿಸಿದ್ರೆ ದುಬಾರಿ ದಂಡ ತೆತ್ತಬೇಕಾಗುತ್ತೆ.