ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ನಿಂತು ಮಾತನಾಡುವ ಧಮ್, ತಾಕತ್ತು ಇದ್ದಿದ್ದು ಯಡಿಯೂರಪ್ಪ ಅವರಿಗೆ ಮಾತ್ರ. ಉಳಿದವರೆಲ್ಲಾ ಶೂನ್ಯ ಎಂದು ಸಚಿವ ರಾಮಲಿಂಗಾ ರೆಡ್ಡಿ ಕುಟುಕಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನಲ್ಲಿ ಯಾರಾದ್ರೂ ಕರ್ನಾಟಕದ ಬಗ್ಗೆ ಮಾತಾಡ್ತಾರಾ? 25 ಜನ ಸಂಸದರಿಗೆ ಮೋದಿ ಎದುರಿಗೆ ನಿಂತು ಮಾತನಾಡುವ ಧೈರ್ಯವಿಲ್ಲ. ಆ ಧೈರ್ಯ ಯಡಿಯೂರಪ್ಪ ಅವರಿಗೆ ಮಾತ್ರ ಇತ್ತು. ಈಗ ದೆಹಲಿಗೆ ಹೋಗುವ ಎಂಪಿಗಳು ಸುಮ್ಮನೆ ಹೋಗ್ತಾರೆ. ತಿರುಪತಿಗೆ ಹೋಗಿ ವೆಂಕಟರಮಣಸ್ವಾಮಿಗೆ ನಮಸ್ಕಾರ ಹಾಕುವ ರೀತಿ, ದೆಹಲಿಗೆ ಹೋಗಿ ಮೋದಿಗೆ ನಮಸ್ಕಾರ ಹಾಕಿ ಬರ್ತಾರೆ ಅಷ್ಟೇ ಎಂದು ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ರಾಜ್ಯವ್ಯಾಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಸಚಿವರು, ಕಾಂಗ್ರೆಸ್ ಬಹಳ ಸ್ಪಷ್ಟವಾಗಿ 10 ಕೆಜಿ ಕೊಡ್ತೀವಿ ಅಂತಾ ಹೇಳಿದೆ, ಏನೇ ಆದ್ರೂ ಕೊಟ್ಟೆ ಕೊಡ್ತೀವಿ. ಬಿಜೆಪಿ ಅಧಿಕಾರಕ್ಕೆ ಬಂದಾಗ 4 ಕೆ.ಜಿ ಇಳಿಸಿದ್ದರು, ಅವರಿಗೆ ಬಿಪಿಎಲ್ ಕಾರ್ಡ್ದಾರರ ಮೇಲೆ ಅನುಕಂಪ ಇಲ್ಲ ಎಂದಿದ್ದಾರೆ.