ಆನೆ ಗಾತ್ರದ ಮೋದಿ ಅವರ ಬಗ್ಗೆ ತಿಗಣೆ ಗಾತ್ರದ ಸಣ್ಣ ಪ್ರಿಯಾಂಕ್ ಖರ್ಗೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಈಶ್ವರಪ್ಪ, ಎಐಸಿಸಿ ಅಧ್ಯಕ್ಷರು ಪ್ರಧಾನಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಮೋದಿಯವರನ್ನು ವಿಷ ಸರ್ಪಕ್ಕೆ ಹೋಲಿಸಿದಾಗ, ಖರ್ಗೆ ಜೀವನದ ಸಾಧನೆ ಮಣ್ಣುಪಾಲಾಯ್ತು. ಆನೆ ಗಾತ್ರದ ಮೋದಿಯವರ ಬಗ್ಗೆ ತಿಗಣೆ ಗಾತ್ರದ ಪ್ರಿಯಾಂಕ್ ಖರ್ಗೆ ಮಾತನಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ್ ಖರ್ಗೆ ಹಾಗೂ ಪ್ರಿಯಾಂಕ ಖರ್ಗೆ ಇಬ್ಬರ ವಿರುದ್ಧವೂ ಗರಂ ಆದರು.
ಕಾಂಗ್ರೆಸ್ ಪ್ರಣಾಳಿಕೆ ಕುರಿತು ಮಾತನಾಡಿ ಅವರು, ಮುಸಲ್ಮಾನರನ್ನು ತೃಪ್ತಿಪಡಿಸುವುದೇ ಕಾಂಗ್ರೆಸ್ ಕೆಲಸವಾಗಿದೆ. ಬಜರಂಗದಳವನ್ನು ನಿಷೇಧ ಮಾಡುವ ವಿಚಾರದಲ್ಲಿ ಅವರಲ್ಲೇ ಗೊಂದಲವಿದೆ. ಭಾರತ ಸಂಸ್ಕೃತಿಯ ರಕ್ಷಣೆಗಿರುವ ಸಂಘಟನೆ ಬಜರಂಗದಳ. ಪಿಎಫ್ಐಗೆ ಹೋಲಿಸಿದ್ದು, ದೊಡ್ಡ ದುರಂತ. ಹಿಂದೂಗಳನ್ನು ಪಕ್ಕಕ್ಕೆ ಸರಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಕಿಡಿಕಾರಿದರು.
ಜಗದೀಶ್ ಶೆಟ್ಟರ್ ಪರಿಸ್ಥಿತಿ ನೋಡಿ ಅಯ್ಯೋ ಪಾಪ ಅನಿಸುತ್ತಿದೆ. ಆರ್ಎಸ್ಎಸ್, ಹಿಂದುತ್ವ ವಿಧಾನಸಭೆಯಲ್ಲಿ ಮಾತನಾಡಿದ್ದ ಶೆಟ್ಟರ್ ಸ್ವಾಭಿಮಾನವನ್ನು ನಾನು ನಿರೀಕ್ಷಿಸುತ್ತಿದ್ದೆ. ಟಿಕೆಟ್ಗಾಗಿ ಶೆಟ್ಟರ್ ಸ್ವಾಭಿಮಾನ ಮಾರಿಕೊಳ್ಳುತ್ತಿದ್ದಾರೆ. ಶೆಟ್ಟರ್ ಬಹಿರಂಗವಾಗಿ ಕಾಂಗ್ರೆಸ್ ನಿಲುವನ್ನು ಖಂಡಿಸಲಿ ಎಂದು ಹೇಳಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜಾತಿವಾದಿ ರಾಜಕಾರಣಿಗಳು. ಕೆಪಿಸಿಸಿ ಅಧ್ಯಕ್ಷ ಒಕ್ಕಲಿಗರೆಲ್ಲಾ ನನ್ನ ಹಿಂದೆ ಬನ್ನಿ ಅಂತಾರೆ. ಇವನಿಗಿಂತ ಬೇರೆ ಜಾತಿವಾದಿ ಬೇರೆಯವರು ಬೇಕಾ? ಡಿ.ಕೆ.ಶಿವಕುಮಾರ್ ಹೆಸರು ಯಾಕೆ. ಕೆಡಿ ಶಿವಕುಮಾರ್ ಅಂತಾ ಇಟ್ಕೊ. ಕರ್ನಾಟಕದಲ್ಲಿ ಜಾತಿ ಹೆಸರಲ್ಲಿ ಬೆಂಕಿ ಹಚ್ಚಿದ್ದೀರಿ. ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಕಳೆದುಕೊಳ್ತೀರಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.